Tuesday, 15 July 2014

ಕರ್ನಾಟಕದ ಸಂಕ್ಷಿಪ್ತ ಇತಿಹಾಸ

ಕರ್ನಾಟಕ ಇತಿಹಾಸ

ಕರ್ನಾಟಕ ಇತಿಹಾಸ     ಕರ್ನಾಟಕದ ಇತಿಹಾಸದ ದಾಖಲೆ ಸುಮಾರು ಎರಡು ಸಾವಿರ ವರ್ಷಕ್ಕೂ ಹೆಚ್ಚಿನದ್ದಾಗಿದೆ. ಹಲವಾರು ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕದಲ್ಲಿ ಆಳಿ ಇದರ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಇತರೆ ಭಾಗಗಳಲ್ಲೂ ಕಂಡುಬರುತ್ತದೆ, ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒರಿಸ್ಸಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿಯ ಚಾಲುಕ್ಯರು, ದೇವಗಿರಿಯ ಯಾದವ ವಂಶದವರು ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದವರು ಎಂದು ಕಂಡುಬರುತ್ತದೆ.
ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳ ಪೈಕಿ ಒಂದಾಗಿದೆ. 1973 ಕ್ಕೂ ಮೊದಲು ಕರ್ನಾಟಕವನ್ನು  “ಮೈಸೂರು ರಾಜ್ಯ” ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದಾಗಿದೆ (1950 ರಲ್ಲಿ). 1956 ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಏಕೀಕರಣಗೊಳಿಸಲಾಯಿಯತು. ಕರ್ನಾಟಕ ಎಂಬುದು “ಕರು+ನಾಡು” ಎಂಬುದರಿಂದ ರೂಪುಗೊಂಡಿದೆ. ಕರುನಾಡು ಎಂದರೆ “ಎತ್ತರದ ಪ್ರದೇಶ” ಎಂದು ಅರ್ಥ. ಕರ್ನಾಟಕ ರಾಜ್ಯವು ಸಮುದ್ರ ಮಟ್ಟದಿಂದ ಸರಾಸರಿ ಎತ್ತರ 1500 ಅಡಿ ಇದ್ದು,  ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದಾಗಿದೆ.
ಕರ್ನಾಟಕ ರಾಜ್ಯಕ್ಕೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ವಾಯವ್ಯದಲ್ಲಿ ಗೋವ, ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರ ಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ರಾಜ್ಯವು ಸುತ್ತುವರಿಯಲ್ಪಟ್ಟಿದೆ. 2011 ರ ಜನಗಣತಿಯಂತೆ, 6 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಹತ್ತು ಭಾರತೀಯ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ 60 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರವಾಗಿದೆ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಲ್ಲಿ ಆಶ್ರಯ ಪಡೆದ ಅನೇಕ ತತ್ವಜ್ಞಾನಿಗಳಿಂದ ಮತ್ತು ಕವಿಗಳಿಂದ ಆರಂಭಿಸಲ್ಪಟ್ಟ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯ ಚಳವಳಿಗಳು ಇಂದಿಗೂ ಪ್ರಸ್ತುತವಾಗಿವೆ. ಕನ್ನಡ ಭಾಷೆ ಭಾರತದಲ್ಲೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ . ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.

ಚರಿತ್ರೆ
ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕೃತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವುದಾಗಿ ತಿಳಿದು ಬಂದಿದೆ ಆದ್ದರಿಂದ ವಿದ್ವಾಂಸರು ಕ್ರಿ.ಪೂ 3000 ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ.ಪೂ.300 ಕ್ಕಿಂತ ಮೊದಲು ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು, ನಂದ ಸಾಮ್ರಾಜ್ಯದ ಭಾಗವಾಗಿದ್ದಿತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮದ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗೂ ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು  ಗಂಗರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು.  ಹಲ್ಮಿಡಿ ಶಾಸನ ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ಈ ಸಾಮ್ರಾಜ್ಯಗಳ ನಂತರ ದಕ್ಷಿಣವನ್ನು ಬಹುಪಾಲು ಆಳಿದ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಇದು 12 ನೇ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು
ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಕರ್ನಾಟಕದಲ್ಲಿ ಹೊಯ್ಸಳರು ಪ್ರಬಲರಾಗಿದ್ದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯ ಸ್ಥಿತಿಯನ್ನು ತಲುಪಿದವು. ಇದು ಕನ್ನಡದ ವಿಶಿಷ್ಟ ಕಾವ್ಯ ಶೈಲಿಗಳ ಉಗಮಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇವಸ್ಥಾನಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡಿತ್ತು. 14 ನೇ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.
1565 ರಲ್ಲಿ ತಾಳಿಕೋಟೆ ಯುದ್ಧದಲ್ಲಿ ದಖ್ಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರವರ್ಧಮಾನಕ್ಕೆ ಬಂದು, ದಖ್ಖನ್ ಪ್ರದೇಶವನ್ನು ಆಳುತ್ತಿದ್ದರು. 17ನೇ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗು ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರ್ಸನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಮೈಸೂರಿನ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ “ರಾಜಪ್ರಮುಖ”ರಾದರು. 1975 ರವರೆಗೆ ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ಸಂದಾಯವಾಗುತ್ತಿತ್ತು ಹಾಗೂ ಇಂದಿಗೂ  ಈ ಮನೆತನದ ಸದಸ್ಯರು ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ 1, 1956 ರಂದು ರಾಜ್ಯ ಪುನರ್ವಿಂಗಡನೆ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲಿನ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ “ವಿಶಾಲ ಮೈಸೂರು” ರಾಜ್ಯ ಅಸ್ತಿತ್ವಕ್ಕೆ ಬಂದಿತು . ನವೆಂಬರ್ 1, 1973 ರಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

Thursday, 13 February 2014

ಜೀವನದ ಪಾಠ ಕಲಿಸುವ ಕನ್ನಡ ವಚನಗಳು

ಸರ್ವಜ್ಞನ ವಚನಗಳು
೧.
ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ
೨.
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ
೩.
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ಸರ್ವಜ್ಞನೆಂದೆನಿಸಿ
ನಿಂದವನು ನಾನೆ ಸರ್ವಜ್ಞ
೪.
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ
೫.
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ
೬.
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ
೭.
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ
೮.
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
೯.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ
೧೦.
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ

ಅಕ್ಕನ ವಚನಗಳು

1

ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೇ
ಪುರಾತನರ ಮನೆಯ ಅಂಗಳದಲ್ಲಿ
ಅಷ್ಟಾಷಷ್ಟಿತೀರ್ಥಂಗಳು ನೆಲೆಸಿಪ್ಪವಾಗಿ?
ಅದೆಂತೆಂದಡೆ:
ಕೇದಾರಸ್ಯೋದಕೇ ಪೀತೇ
ವಾರಣಸ್ಯಾಂ ಮೃತೇ ಸತಿ
ಶೀಶೈಲ ಶಿಖರೇ ದೃಷ್ಟೇ
ಪುನರ್ಜನ್ಮ ನ ವಿದ್ಯತೇ
ಎಂಬ ಶಬ್ದಕ್ಕಧಿಕವು
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ
ಅಲ್ಲಿಂದ ಹೊರಗೆ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ
ನಿಮ್ಮ ಭಕ್ತರ ಮನೆಯಂಗಳ ವಾರಣಾಸಿಯಿಂದ
ಗುಂಜಿಯಧಿಕ ನೋಡಾ!

2
ನಿನ್ನ ಅಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ, ಬಸವಣ್ಣ
ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯ, ಬಸವಣ್ಣ
ನಿನ್ನ ಸದ್ಭಕ್ತಿಯ ತಿಳಿದು
ಎನಗೆ ನಿಜಸಾಧ್ಯವಾಯಿತ್ತಯ್ಯ, ಬಸವಣ್ಣ
ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ
ಗುರು ನೀನಾದ ಕಾರಣ
ನಾನೆಂಬುದಿಲ್ಲವಯ್ಯ ಬಸವಣ್ಣ

3
ಅಯ್ಯ, ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯ, ನಿಮ್ಮ ಅನುಭಾವಿಗಳು
ಎನ್ನನೊರೆದೊರೆದು, ಕಡಿಕಡಿದು, ಅರೆದರೆದು
ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು!
ಎನ್ನ ಸರ್ವಭೋಗಾದಿ ಭೋಗಂಗಳೆಲ್ಲ
ನಿಮ್ಮ ಶರಣರಿಗರ್ಪಿತವಾಗಿ
ಎನ್ನ ಪ್ರಾಣ ಶುದ್ಧವಾಯಿತ್ತು!
ಎನ್ನ ಸರ್ವೇಂದ್ರಿಯಗಳೆಲ್ಲವು
ನಿಮ್ಮ ಶರಣರ ಪ್ರಸಾದವ ಕೊಂಡ ಕಾರಣ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯ!
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರಿಗೆ ತೊಡಿಗೆಯಾದೆನಯ್ಯ ಪ್ರಭುವೆ!

4
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಾಧಿಸಿ ಕೊಟ್ಟನು
ಮಡಿವಾಳ ಮಾಚಿ ತಂದೆಯ ಮನೆಯ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು
ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು

5
ತನು ಮೀಸಲಾಗೆ ಭಾವವಚ್ಚುಗೊಂಡಿಪ್ಪುವುದವ್ವ
ಅಚ್ಚುಗದ ಸ್ನೇಹ, ನಿಚ್ಚಟದ ಮೆಚ್ಚುಗೆ,
ಬೆಚ್ಚು ಬೇರಾಗದ ಭಾವವಾಗೆ
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ
6
  ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚರೆ ಗರಿದೋರದಂತೆ ನಡಬೇಕು
ಅಪ್ಪಿದರೆ ಅಸ್ಠಿಗಳು ನುಗ್ಗುನುರಿಯಾಗಬೇಕು
ಬೆಚ್ಚರೆ ಬೆಸುಗೆಯರಿಯದಂತಿರಬೇಜು
ಮಚ್ಚು ಒಪ್ಪಿತ್ತು ಚೆನ್ನಮಲ್ಲಿಕಾರ್ಜುನಯ್ಯನ ಸ್ನೇಹ

7
ನಡೆಯದ ನುಡಿಗಡಣ, ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದವಗುಣಿಯ ಸಂಗವದೇತಕ್ಕೆ ಪ್ರಯೋಜನ?
ದಯವಿಲ್ಲದ ಧರ್ಮವು, ಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ?
ಎನ್ನ ದೇವ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯವು
ಪ್ರಾಣಗುಣವರಿಯದವರ ಕೂಡೆ ಪ್ರಸಂಗವೇತಕ್ಕೆ?

8
ಪ್ರಾಣ ಹೊಲಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವದಾನವಮಾನವರೆಲ್ಲಾ ಜೋಳವಾಳಿಯಲೈದಾರೆ
ಜಾಣ ಕಲುಕುಟಿಕನನಗಲದೆ ಹೂವನೆ ಕೊಯ್ದು
ಕಲಿಯುಗ ಕರಸ್ಥಲದೇವಪೂಜೆ ಘನ
ಮೇರುವಿನ ಕುದುರೆ ನಲಿದಾಡಲದು
ಭೂತರಾಜ ರಾಜರಂಗಳಿಗಳ[?] ಜಗಳ ಮೇಳಾವ
ಮರುಪತ್ತದ ಮಾತು ನಗೆ ಹಗರಣ
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯ
ನೀ ಹೇಳಬೇಕು ಭಕ್ತರೆಂತಪ್ಪರೋ
ಪಂಚವರ್ಣದ ಬಣ್ಣ ಸಂಧೆವರದಾಟವು[?]
ಚೆನ್ನಮಲ್ಲಿಕಾರ್ಜುನಯ್ಯ,

ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು

9
ಹಸಿದ ಹಸುಳೆಗೆರೆದೆಯಾಹ
ವಿಷವ, ರಾಜಹಂಸೆಗುಕ್ಕು
ರಸವನೀಂಟಿಸಿದೆ, ಮಹೇಶ, ನೋಳ್ಪ ಕಣ್ಣೊಳು
ಕಸವ ಕವಿದೆ, ಕರ್ಣಗಳಿಗೆ
ದಸಿಯ ಬಡಿದೆ; ಕರುಣವಿಲ್ಲ-
ದಸಮಪಾತಕವನು ಎನಗೆ ಕೇಳಿಸಿಂದು ನೀ ||೧||
ಹರನೆ, ಕಣ್ಣೊಳುರಿಯನ್ನಿಟ್ಟ
ದುರುಳ, ನಂಜುಗೊರಲ, ಸರ್ಪ
ಧರ ತ್ರಿಶೂಲಿ! ನಿನ್ನ ನಂಬಿದವರನಸಿಯೊಳು
ಅರೆದು ಸಣ್ಣಿಸುವುದೆ ನಿನ್ನ
ಕರುಣವಲ್ಲದದೆಲ್ಲರಂತೆ
ಕರುಣಿಯೆಂಬ ಮರುಳನಾವ ?! ಮಗನ ಕೊಲಿಸಿರೇ? ||೨||
ಯತಿಯ ರಸಿಕನೆನಿಸಿ, ಪತಿ-
ವ್ರತೆಯ ಸಿತಗೆಯೆನಿಸಿ, ದಿವ್ಯ-
ಮತಿಗೆ ಸಟೆಯ ಬಿತ್ತಿ, ದಾನಿ-
ಗತಿದರಿದ್ರದೆಡರನೀವ
ಮತವೆ ನಿನ್ನದುತ್ತಮಿಕೆಯ ನೆರೆವ ತಪ್ಪೆಯ? ||೩||
ಅರಗಿಲೆರೆದ ಬೊಂಬೆಗುರಿಯ
ಭರಣವನ್ನು ತೊಡಿಸಲಹುದೆ?!
ಹರನೆ ನಿನ್ನ ಸ್ತೋತ್ರವಲ್ಲದನ್ಯವರಿಯದ
ತರಳೆಯೆನ್ನ ಕಿವಿಯೊಳೆನ್ನ
ಪುರುಷವಚನವನ್ನು ತುಂಬೆ
ಕರುಣವಿಲ್ಲಲಾ ಕಪರ್ದಿ... ||೪||
ಗಂಡನುಳ್ಳ ಹೆಣ್ಣನಾವ
ಗಂಡು ಬಯಸಿ ಕೇಳ್ದಡವನ
ತುಂಡುಗಡಿಯದಿಹನೆಯವಳ ಗಂಡನೆನ್ನಯ
ಗಂಡ ನೀನಿರಲ್ಕೆ ಕೇಳ್ದೊ
ಡಂಡುಗೊಂಡು ಸುಮ್ಮನಿಹೆ! ಶಿ-
ಖಂಡಿಯೆಂಬ ನಾಮ ಸಾಮ್ಯವಾದುದಿಂದಲಿ ||೫||

10
ಪತಿಯೆ ಗತಿಯೆನಿಪ್ಪ ಸತಿಗೆ
ಪತಿವ್ರತಾಭಿಧಾನ ಸೆಲ್ವು
ದಿತರ ಪತಿಯ ರತಿಯೊಳಿರ್ಪ ಸತಿಯ ಕ್ಷಿತಿಯೊಳು
ಸಿತಗೆಯೆನ್ನದಿಹರೆ? ದಿಟದ
ಪತಿಯದೊರ್ವ, ಸತಿಗೆ ಸಟೆಯ
ಪತಿಯದೊರ್ವನುಂಟೆ ತಳರಿ ತಳುವದೆ?!

11

ಕಳವಳದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತಿದ್ದೆನವ್ವ
ತಿಳುಹೌ ಬುದ್ಧಿಯ ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ

12

ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವ
ನಿಮನಿಮಗೆಲ್ಲ ಶೃಂಗಾರವ ಮಾಡಿಕೊಳ್ಳಿ
ಚೆನ್ನಮಲ್ಲಿಕಾರ್ಜುನನೀಗಳೇ ಬಂದಹನು
ಇದಿರುಗೊಳ್ಳ ಬನ್ನಿರೇ ಅವ್ವಗಳಿರಾ!

13

ಬಂದಹನೆಂದು ಬಟ್ಟೆಯ ನೋಡಿ
ಬಾರದಿದ್ದರೆ ಕರಗಿ ಕೊರಗಿದೆನವ್ವ
ತಡವಾದರೆ ಬಡವಾದೆ ತಾಯೆ
ಚೆನ್ನಮಲ್ಲಿಕಾರ್ಜುನ ಒಂದಿರುಳಗಲಿದರೆ
ತೆಕ್ಕೆ ಸಡಿಲಿದ ಜಕ್ಕವಕ್ಕಿಯಂತಾದೆನವ್ವ

14

ಉರಿಯ [ಪಳಿಯನೆ] ಉಡಿಸಿ, ಊರಿಂದ ಹೊರಗಿರಿಸಿ
ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವ
ತುರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ
ಕರೆ ನೊಂದೆ ನೋಡವ್ವ
ಅವಸ್ಥೆಯಿಂದ ಹಿರಿದು ದುಃಖದಲ್ಲಿ ಬೆಂದೆ
ಕರಿ ಬೆಂದು, ಗಿರಿ ಬೆಂದು
ಹೊನ್ನರಳಿಯ ಮರವನುಳಿದು
ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನ
  

15

ಸಾವಿಲ್ಲದ ಸಹಜಂಗೆ, ರೂಹಿಲ್ಲದ ಚೆಲುವಂಗೆ
ಭವವಿಲ್ಲದ ಅಭವಂಗೆ, ಭಯವಿಲ್ಲದ ನಿರ್ಭಯ ಚೆಲುವಂಗೆ
ನಾನೊಲಿದೆನಯ್ಯ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿದ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ

16

ಅತ್ತೆ ಮಾಯೆ, ಮಾವ ಸಂಸಾರಿ
ಮೂವರು ಮೈದುನರು ಹುಲಿಯಂಥಾ ಅವದಿರು
ನಾಲುವರು ನಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿರ ಕಾವಲು
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನ ಕೂಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರೆ ಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ
ಸಜ್ಜನದ ಗಂಡನ ಮಾಡಿಕೊಂಬೆನು

 

ಬಸವಣ್ಣನ ವಚನಗಳು

೧.
ಉದಕದೊಳಗೆ ಬೈಚಿಟ್ಟ
ಬೈಕೆಯ ಕಿಚ್ಚಿನಂತೆ ಇದ್ದಿತ್ತು;
ಸಸಿಯೊಳಗಣ
ರಸದ ರುಚಿಯಂತೆ ಇದ್ದಿತ್ತು;
ನನೆಯೊಳಗಣ
ಪರಿಮಳದಂತೆ ಇದ್ದಿತ್ತು;
ಕೂಡಲಸಂಗಮದೇವರ ನಿಲವು
ಕನ್ನೆಯ ಸ್ನೇಹದಂತೆ ಇದ್ದಿತ್ತು.
೨.
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರ ಸಂಹಾರದಿಂದ ಮುನ್ನ
ಹರಿವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ, ಮುನ್ನ, ಮುನ್ನ,
ಅಂದಂದಿಗೆ ಎಳೆಯ ನೀನು, ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವ.
೩.
ಅಯ್ಯಾ, ನೀನು ನಿರಾಕಾರವಾದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನವಾಗಿ ಬಂದಲ್ಲಿ
ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.
೪.
ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!
ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಕೂಡಲಸಂಗಮದೇವ.
೫.
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆವುತ್ತಿದೆ ನೋಡಾ!
ಸಂಸಾರಸಾಗರ ಉರದುದ್ದವೇ ಹೇಳಾ ?
ಸಂಸಾರಸಾಗರ ಕೊರಲುದ್ದವೇ ಹೇಳಾ ?
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?
ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ!
ಕೂಡಲಸಂಗಮದೇವ, ನಾನೇವೆನೇವೆನಯ್ಯ!
೬.
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು.
ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.
೭.
ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
೮.
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವ.
೯.
ಇಂದಿಂಗೆಂತು ನಾಳಿಂಗೆಂತೆಂದು
ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ!
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ!
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ!
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದಹುದೀ ಮಾಯೆ ಕೂಡಲಸಂಗಮದೇವ!
೧೦.
ಆಸತ್ತೆನಲಸಿದೆನೆಂದರೆ ಮಾಣದು,
ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,
ಏವೆನೇವೆನೆಂದರೆ ಮಾಣದು-
ಕಾಯದ ಕರ್ಮದ ಫಲಭೋಗವು.
ಕೂಡಲಸಂಗನ ಶರಣರು ಬಂದು
"ಹೋ ಹೋ ಅಂಜದಿರಂಜದಿರು" ಎಂದರಾನು ಬದುಕುವೆನು.
೧೧.
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ;
"ಓಂ ನಮಶ್ಶಿವಾಯ" ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ.
೧೨.
ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ?
ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ?
ಕೂಡಲಸಂಗಮದೇವಾ ಇನ್ನೆಂದೋ
ಪರಮಸಂತೋಷದಲಿಹುದೆನಗೆಂದೋ ?
೧೩.
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
೧೪.
ಲೇಸ ಕಂಡು ಮನ ಬಯಸಿ ಬಯಸಿ
ಆಶೆ ಮಾಡಿದರಿಲ್ಲ ಕಂಡಯ್ಯ.
ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ
ಗೋಣು ನೊಂದುದಯ್ಯ.
ಕೂಡಲಸಂಗಮದೇವ ಕೇಳಯ್ಯ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.
೧೫.
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ?
ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.
೧೬.
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?
೧೭.
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,
ವಿಚಾರಿಸಿದರೇನು ಹುರುಳಿಲ್ಲವಯ್ಯ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
ನೀವಿರಿಸಿದಿರಯ್ಯ ಕೂಡಲಸಂಗಮದೇವ.
೧೮.
ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ
ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ
ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.
೧೯.
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ!
೨೦.
ಕೊಂಬೆಯ ಮೇಲಣ ಮರ್ಕಟನಂತೆ
ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.
೨೧.
ಅಂದಣವನೇರಿದ ಸೊಣಗನಂತೆ
ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು
ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯನೇ, ಕೂಡಲಸಂಗಮದೇವ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.
೨೨.
ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು
ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.
೨೩.
ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ
ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ;
ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ.
ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.
೨೪.
ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ?
೨೫.
ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು
ಕಿಚ್ಚಿನೊಳಿಕ್ಕುವೆನು.
೨೬.
ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ;
ನುಡಿವಲ್ಲಿ ಅಧಿಕನೆಂದೆನಿಸಿತ್ತು.
ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ,
ಕಡುಗೂಪ ಮಡದಿ ತಾ ಮುಟ್ಟಲಮ್ಮಳು;
ಒಡಲನುರಿಗೊಂಬುದು: ಒಡವೆಯನರಸು ಕೊಂಬ;
ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ.
ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕ
ಇನ್ನು ಬಯಸಿದರೊಳವೆ ಕೂಡಲಸಂಗಮದೇವ ?
೨೭.
ವಚನದ ಹುಸಿ-ನುಸುಳೆಂತು ಮಾಬುದೆನ್ನ ?
ಮನದ ಮರ್ಕಟತನವೆಂತು ಮಾಬುದೆನ್ನ ?
ಹೃದಯದ ಕಲ್ಮಷವೆಂತು ಮಾಬುದೆನ್ನ ?
ಕಾಯವಿಕಾರಕ್ಕೆ ತರಿಸಲುವೋದೆನು!
ಎನಗಿದು ವಿಧಿಯೇ, ಕೂಡಲಸಂಗಮದೇವ ?
೨೮.
ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ?
ಅಕಟಕಟ, ಮದನಂಗೆ ಮಾರುಗೊಡುವರೆ ?
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ?
ಕೂಡಲಸಂಗಮದೇವ ?
೨೯.
ವಿಕಳನಾದೆನು ಪಂಚೇಂದ್ರಿಯಧಾತುವಿಂದ!
ಮತಿಗೆಟ್ಟನು ಮನದ ವಿಕಾರದಿಂದ!
ಧೃತಿಗೆಟ್ಟೆನು ಕಾಯವಿಕಾರದಿಂದ!
ಶರಣುವೊಕ್ಕೆನು ಕೂಡಲಸಂಗಮದೇವಯ್ಯ
ಎನ್ನುವನು ಕಾಯಯ್ಯ.
೩೦.
ಕಾಯವಿಕಾರ ಕಾಡಿಹುದಯ್ಯ!
ಮನೋವಿಕಾರ ಕೂಡಿಹುದಯ್ಯ!
ಇಂದ್ರಿಯವಿಕಾರ ಸುಳಿದಿಹುದಯ್ಯ!
ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!
ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!
ಅನುಪಮಸುಖ ಸಾರಾಯ ಶರಣರಲ್ಲಿ,
ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?
೩೧.
ಆನು ಒಬ್ಬನು; ಸುಡುವರೈವರು.
ಮೇಲೆ ಕಿಚ್ಚು ಘನ, ನಿಲಲು ಬಾರದು.
ಕಾಡುಬಸವನ ಹುಲಿ ಕೊಂಡೊಯ್ದರೆ
ಆರೈಯಲಾಗದೆ ಕೂಡಲಸಂಗಮದೇವ ?
೩೨.
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ,
ತಿಳಿಯಲೀಯದು; ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ.
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.
೩೩.
ವಿಷಯವೆಂಬ ಹಸುರನೆನ್ನ ಮುಂದೆ ತಂದು
ಪಸರಿಸಿದೆಯಯ್ಯ;
ಪಶುವೇನ ಬಲ್ಲುದು ಹಸುರೆಂದೆಳಸುವುದು
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ
ಕೂಡಲಸಂಗಮದೇವ.
೩೪.
ಅಯ್ಯ, ಎಳಗರು ತಾಯನರಸಿ ಬಳಲುವಂತೆ
ಅಯ್ಯ, ನಿಮ್ಮನರಸಿ ಬಳಲುತ್ತಿದ್ದೇನೆ,
ಅಯ್ಯ, ನೀವೆನ್ನ ಮನಕ್ಕೆ ಪ್ರಸನ್ನವ ಮಾಡಿ
ಕಾರುಣ್ಯವ ಮಾಡಿರಯ್ಯ!
ನೀವೆನ್ನ ಮನಕ್ಕೆ ನೆಲೆವನೆಯಾಗಿ ಕಾರುಣ್ಯವ ಮಾಡಿರಯ್ಯ!
ನೀವಿನಿತು ಲೇಸನೀಯಯ್ಯ, ಅಂಬೇ, ಅಂಬೇ,
ಕೂಡಲಸಂಗಮದೇವ!
೩೫.
ಕೆಸರಲ್ಲಿ ಬಿದ್ದ ಪಶುವಿನಂತೆ
ಅನು ದೆಸೆದೆಸೆಗೆ ಬಾಯ ಬಿಡುತಿದ್ದೇನಯ್ಯ
ಅಯ್ಯಾ, ಆರೈವರಿಲ್ಲ--
"ಅಕಟಕಟಾ! ಪಶು" ವೆಂದೆನ್ನ
ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ.
೩೬.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ ?
ಶಿವ ಶಿವಾ! ಹೋದಹೆ, ಹೋದಹೆನಯ್ಯ!
ನಿಮ್ಮ ಮನದೆತ್ತಲೆನ್ನ ತೆಗೆಯಯ್ಯ
ಪಶುವಾನು, ಪಶುಪತಿ ನೀನು.
ತುಡುಗುಣಿಯೆಂದೆನ್ನ ಹಿಡಿದು ಬಡಿಯದ ಮುನ್ನ.
ಒಡೆಯ, ನಿಮ್ಮ ಬಯ್ಯದಂತೆ ಮಾಡು
ಕೂಡಲಸಂಗಮದೇವ.
೩೭.
ಬಲೆಗೆ ಸಿಕ್ಕಿದ ಮೃಗದಂತೆ ನಾನಯ್ಯ.
ಮರಿದಪ್ಪಿದ ಹುಲ್ಲೆಯಂತೆ
ದೆಸೆದೆಸೆಗೆ ಬಾಯ ಬಿಡುತಿರುವೆನಯ್ಯ,
ನಾನಾರ ಸಾರುವೆನಯ್ಯ.
ತಾಯಾಗಿ ತಂದೆಯಾಗಿ ನೀನೇ, ಸಕಲ ಬಂಧುಬಳಗವು ನೀನೆ
ಕೂಡಲಸಂಗಮದೇವ.
೩೮.
ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತಿದ್ದೇನಯ್ಯ!
ನೀವಲ್ಲದೆ ಮತ್ತಾರೂ ಎನ್ನನರಿವರಿಲ್ಲ ನೋಡಯ್ಯ!
ಕೂಡಲಸಂಗಮದೇವ, ನೀನಲ್ಲದೊಳಕೊಂಬವರಿಲ್ಲವಯ್ಯ.
೩೯.
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ
ಎನ್ನ ವಶವೇ ಅಯ್ಯ ?
ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ.
ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.
೪೦.
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಸಲಹುತ್ತ, "ಶಿವಶಿವಾ" ಎಂದೋದಿಸಯ್ಯ.
ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.

 

 


ಎಸ್.ಎಲ್. ಭೈರಪ್ಪ : ವಿಕಿಪೀಡಿಯದಿಂದ ಸಂಗ್ರಹ

ಎಸ್.ಎಲ್. ಭೈರಪ್ಪ

ಎಸ್.ಎಲ್. ಭೈರಪ್ಪ
S.L.Bhyrappa.jpg
ಶ್ರೀ ಎಸ್.ಎಲ್. ಭೈರಪ್ಪ
ಜನನ: ಆಗಸ್ಟ್ 20, 1931
ಜನನ ಸ್ಥಳ: ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿ: ಲೇಖಕ
ರಾಷ್ಟ್ರೀಯತೆ: ಭಾರತೀಯ
ಬರವಣಿಗೆಯ ಕಾಲ: (ವೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಸಾಹಿತ್ಯದ ವಿಧ(ಗಳು): ಕಥೆ, ಕಾದಂಬರಿ, ಇತಿಹಾಸ
ಪ್ರಭಾವಗಳು: ಗೊರೂರು ರಾಮಸ್ವಾಮಿ ಅಯ್ಯಂಗಾರ, ಆದಿ ಶಂಕರಾಚಾರ್ಯ, ಮಹಾತ್ಮ ಗಾಂಧಿ, ಆನಂದ ಕುಮಾರಸ್ವಾಮಿ, ರಾಮಕೃಷ್ಣ ಪರಮಹಂಸ , ಸ್ವಾಮೀ ವಿವೇಕಾನಂದ
ಅಂತರ್ಜಾಲ ತಾಣ: http://www.slbhyrappa.com/
(ಇತರ ವಿಷಯಗಳು)
"ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ" ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇವರ ಕಾದಂಬರಿ ಪ್ರಕಾರ ಹುಲುಸಾಗಿ ಬೆಳೆದು ಅತಿ ಹೆಚ್ಚು ಓದುಗರನ್ನು ತಲುಪಿದೆ. ಒಟ್ಟಾರೆ ಇಪ್ಪತ್ತನೆಯ ಶತಮಾನ ಕಾದಂಬರಿ ಯುಗ ಅನ್ನಿಸಲು ಇವರ ಕೊಡುಗೆಯು ಅಪಾರವಾಗಿದೆ. ಈ ಪರಂಪರೆಯಲ್ಲಿ ಜನ ಮನ ಮುಟ್ಟಿದ ಸಾಹಿತಿಗಳು ಬರೆದೇ ಬದುಕನ್ನು ರೂಪಿಸಿ ಕೊಂಡವರಿದ್ದಾರೆ. ಇದಲ್ಲದೆ ಬದುಕಿ ಗೊಂದು ವೃತ್ತಿಯಿದ್ದು ವಿವಿಧ ಓದುಗರ ನಡುವೆ ಕನ್ನಡ ಸಾಹಿತ್ಯಕ್ಕೆ ಭಾಷೆ, ವಸ್ತು, ವಿನ್ಯಾಸದ ಹೊಸತು ಕೊಟ್ಟವರೂ ಇದ್ದಾರೆ. ಬರವಣಿಗೆ ಪ್ರವೃತ್ತಿಯಾಗಿಸಿಕೊಂಡು, ಅಕಾಡೆಮಿಕ್ ಆಗಿದ್ದೂ, ಹೆಚ್ಚು ಓದುಗರನ್ನು ತಲುಪಿದ ಜನಪ್ರಿಯ ಕಾದಂಬರಿಕಾರರೆಂದರೆ ಡಾ | ಎಸ್. ಎಲ್. ಭೈರಪ್ಪ ಅವರು. ತಾವು ಆಯ್ಕೆ ಮಾಡಿಕೊಂಡ ವಸ್ತು, ಅದನ್ನು ನಡೆಸುವ ರೀತಿ, ಅದಕ್ಕೊಂದು ಅಂತ್ಯ ಕೊಡುವ ಲೇಖಕನ ಮನೋಸ್ಥಿತಿ ಬಗ್ಗೆ ಚರ್ಚೆಗಳಲ್ಲಿ ಭಿನ್ನ ಅಭಿಪ್ರಾಯಗಳೂ ಇವೆ. ಇಂಥ ಸಂದರ್ಭ ದಲ್ಲೂ ಭೈರಪ್ಪನವರ ಕಾದಂಬರಿಗಳು ಬಹು ಓದುಗರ ಚರ್ಚೆಯಲ್ಲಿರುತ್ತವೆ. ಮಾಧ್ಯಮಗಳಲ್ಲಿ ವಿಮರ್ಶೆ ಮೂಲಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಲೆದೋರಿದರೂ ಅದು ಒಂದು ವಲಯದ ಚರ್ಚೆಯೆಂದು ಅಭಿಪ್ರಾಯಿಸುವವರೂ ಇದ್ದಾರೆ.

ಜೀವನ

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೦-೮-೧೯೩೧ ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರ ಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತಿಕೆಯನ್ನು ಮೈಗೂಡಿಸಿ ಕೊಂಡರು. ಅವರ ೫ನೇ ವಯಸ್ಸಿನಲ್ಲಿ ಅವರ ತಾಯಿ ಬಡತನ - ಪ್ಲೇಗ್ ಗಳಿಗೆ ಜೀವವನ್ನು ತೆತ್ತಾಗ ಬದುಕಿನ ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿ ಕೊಳ್ಳ ತೊಡಗಿ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ ೧೩ ವರ್ಷ!
ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ. ಎ. ನಲ್ಲಿ ಸುವರ್ಣಪದಕ ದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ", ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು. ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೬೧ ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ ನಾಲ್ಕು ದಶಕಗಳಲ್ಲಿ ೨೧ ಕಾದಂಬರಿಗಳನ್ನು ಬರೆದಿದ್ದಾರೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದ ಗೊಂಡಿವೆ. ಗೃಹಭಂಗ , ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ.
ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆ ಆಗಿದ್ದರು.
ಹೆಚ್ಚಿನ ಓದು : ಭೈರಪ್ಪನವರ ಬಾಲ್ಯ ಕಾಲದ ಹೃದಯಸ್ಪ ರ್ಶಿ ಚಿತ್ರಣಕ್ಕಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ "ಮರೆಯಲಾದೀತೇ" ವ್ಯಕ್ತಿ ಚಿತ್ರ ಸಂಗ್ರಹದಲ್ಲಿ ಭೈರಪ್ಪನವರ ಬಗೆಗಿನ ಅಧ್ಯಾಯವನ್ನು ಓದಿ.

ವಿವಾದಗಳು

ಭೈರಪ್ಪನವರು ಅವರ ನಿಲುವುಗಳಿಂದ ಹಾಗೂ ತಮ್ಮ ಕಾದಂಬರಿಗಳನ್ನು ಬರೆಯಲು ಆಯ್ಕೆ ಮಾಡುವ ವಿಷಯಗಳಿಂದ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ. ಅವರ ಕೆಲವು ಪ್ರಮುಖ ಕೃತಿಗಳು (ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ಪರ್ವ, ಸಾರ್ಥ,ಆವರಣ) ಭಾರತದ ಪುರಾತನ ಸಂಸ್ಕೃತಿಯ ಸಾರವನ್ನು ಹೊಂದಿವೆ. ಆದ್ದರಿಂದ ಇವರು ಕೆಲವು ಸಾಹಿತಿಗಳಿಂದ, ವಿಶೇಷವಾಗಿ ನವ್ಯ ಸಾಹಿತಿಗಳಿಂದ ಟೀಕೆಗೆ ಗುರಿಯಾಗಬೇಕಾಯಿತು.
ರಾಷ್ಟ್ರಗೀತೆಯನ್ನು ವಾದ್ಯಗಳಲ್ಲಿ ನುಡಿಸಿದ ಪ್ರಸಂಗದಲ್ಲಿ ಎನ್. ಆರ್. ನಾರಾಯಣಮೂರ್ತಿಯವರನ್ನು ಭೈರಪ್ಪನವರು ಬೆಂಬಲಿಸಿದ್ದರು. ಕಾವೇರಿ ವಿವಾದ ಗಲಭೆಗಳಿಗೆ ಪ್ರತಿಭಟನೆಗಳಿಗೆ ತಿರುಗಿದ ಸಂದರ್ಭದಲ್ಲಿ ಗಲಭೆಗಳಿಂದ, ಪ್ರತಿಭಟನೆಗಳಿಂದ ವಿವಾದದ ಇತ್ಯರ್ಥ ಸಾಧ್ಯವಾಗುವುದಿಲ್ಲ ಎಂಬ ನಾರಾಯಣಮೂರ್ತಿಯವರ ವಾದವನ್ನು ಕೂಡ ಇವರು ಸಮರ್ಥಿಸಿದ್ದರು.
ಟಿಪ್ಪು ಸುಲ್ತಾನ್ ಧರ್ಮ ಸಹಿಷ್ಣುವೇ ಅಲ್ಲವೇ ಎಂಬ ವಿಚಾರದಲ್ಲಿ ಗಿರೀಶ್ ಕಾರ್ನಾಡ್‍ರೊಂದಿಗೆ ಭೈರಪ್ಪನವರು ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ವಾದಿಸಿದ್ದರು. ಕಾರ್ನಾಡ್ ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಕಲ್ಪನೆಗಳನ್ನು ಸಾರುತ್ತಾ ಅವನ ವ್ಯಕ್ತಿತ್ವವನ್ನು ಅನಗತ್ಯವಾಗಿ ಧರ್ಮಸಹಿಷ್ಣು ಎಂಬ ರೀತಿಯಲ್ಲಿ ವೈಭವೀಕರಿಸಿದ್ದಾರೆ ಎಂಬುದು ಭೈರಪ್ಪನವರ ಅನಿಸಿಕೆಯಾಗಿದೆ. ಟಿಪ್ಪು ಸುಲ್ತಾನ್ ಒಬ್ಬ ಧರ್ಮಾಂಧನಾಗಿದ್ದು ಹಿಂದೂಗಳನ್ನು ಸಹಿಸುತ್ತಿರಲಿಲ್ಲ ಎಂಬುದು ಅವರ ವಾದದ ಸಾರವಾಗಿತ್ತು. ಯು. ಆರ್. ಅನಂತ್‍ಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಪ್ರಮುಖ ಟೀಕಾಕಾರ. ಭೈರಪ್ಪನವರು ತಮ್ಮ ಹಾಗೂ ಅನಂತಮೂರ್ತಿಯವರ ನಡುವೆ ನಡೆದ ವಾದ ವಿವಾದಗಳನ್ನು ಭಿತ್ತಿ ಎಂಬ ತಮ್ಮ ಕಾದಂಬರಿಯಲ್ಲಿ ಹಾಗೂ ನಾನೇಕೆ ಬರೆಯುತ್ತೇನೆಯ ಕೆಲವು ಪ್ರಬಂಧಗಳಲ್ಲಿ ದಾಖಲಿಸಿದ್ದಾರೆ.
ಮುಸ್ಲೀಮ್ ಆಳ್ವಿಕೆಯು ಭಾರತದ ಸಂಸ್ಕೃತಿ ಹಾಗೂ ಸಾಮಾಜಿಕ ಬೆಳವಣಿಗೆಗಳ ಮೇಲೇ ಬೀರಿದ ಪರಿಣಾಮವನ್ನು ಬಿಂಬಿಸುವ, ಐತಿಹಾಸಿಕ ಸತ್ಯಗಳನ್ನೊಳಗೊಂಡ ಭೈರಪ್ಪನವರ ಇತ್ತೀಚಿನ ಕಾದಂಬರಿ ಆವರಣ ಕರ್ನಾಟಕದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ. ಭೈರಪ್ಪನವರು ಇತಿಹಾಸದ ಹೆಸರಲ್ಲಿ ಸಮಾಜವನ್ನ್ನು ಒಡೆದು ಆಳಲು ಬಯಸುವ ಮೂಲಭೂತವಾದಿ ಹಾಗೂ ಅವರಿಗೆ ಕಾದಂಬರಿ ಬರೆಯುವ ಜ್ಞಾನವಿಲ್ಲ ಎಂದು ಹೇಳಿಕೆ ಕೊಟ್ಟ ಅನಂತಮೂರ್ತಿಯವರು ಸಾಹಿತ್ಯ ಲೋಕದಲ್ಲಿ ಕಟು ಟೀಕೆಗೆ ಒಳಗಾದರು. ಆದರೆ ಭೈರಪ್ಪನವರು ತಾವು ಯಾವುದರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗದೆ ಮಾಡಿದ ಸತ್ಯಾನ್ವೇಷಣೆಯ ಫಲವೇ ಆವರಣ ಎಂದು ಸಮರ್ಥಿಸಿಕೊಂಡಿದ್ದಾರೆ. ಟೀಕಾಕಾರರು ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಕಾದಂಬರಿಯಲ್ಲಿ ಸೂಚಿಸಿರುವ ಆಕರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಮತಾಂತರ ಮತ್ತು ಕವಲು ಎಂಬ ಲೇಖನಗಳಿಗೆ ಬಹಳ ದಿನಗಳ ಕಾಲ ಪರ ಹಾಗೂ ವಿರೋಧಿ ವಿಮರ್ಶೆಗಳು ಪ್ರಕಟವಾಗಿದ್ದವು. ಜನಸಾಮಾನ್ಯರಿಗಂತೂ ಇದರಿಂದ ಬಹಳ ರೋಚಕ ಅನುಭವವಾಯಿತು.
ಅವರ ಇತ್ತೀಚಿನ 'ಕವಲು' ಕಾದಂಬರಿ ಕೂಡಾ ಸಾಕಷ್ಟು ಚರ್ಚೆ-ವಿವಾದಗಳಿಗೆ ಗ್ರಾಸವಾಗಿತ್ತು. ಕಾದಂಬರಿಯಲ್ಲಿ 'ಆಧುನಿಕ ಮಹಿಳಾ ಸಿದ್ದಾಂತ' ದಲ್ಲಿನ ಪೊಳ್ಳುತನಗಳು ಹಾಗೂ ಅದರ ಸಾಮಾಜಿಕ ಪರಿಣಾಮವನ್ನೇ ವಸ್ತುವನ್ನಾಗಿರಿಸಿಕೊಂಡು ಬರೆಯಲಾಗಿದ್ದರಿಂದ ಅದಕ್ಕೆ 'ಮಹಿಳಾ ಪ್ರಗತಿ ವಿರೋಧಿ' ಎಂಬ ಹಣೆಪಟ್ಟಿಯನ್ನೂ ಕಟ್ಟಲಾಗಿತ್ತು. ಇದೇ ಕಾರಣಕ್ಕಾಗಿ ಖ್ಯಾತ ಕಥೆ, ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್ ರವರು ಆ ಕಾದಂಬರಿಯನ್ನು ಯಾರೂ ಓದ ಕೂಡದೆಂದು ಸಮಾರಂಭವೂಂದರಲ್ಲಿ ಹೇಳಿದ್ದರು, ಇದೂ ಕೂಡಾ ಸಾಕಷ್ಟು ಚರ್ಚೆ,ವಿವಾದಗಳಿಗೆ ನಾಂದಿ ಹಾಡಿತ್ತು. 'ಭೈರಪ್ಪನವರು ಬಲಪಂಥೀಯರು' ಎಂಬುದು ಅವರ ಮೇಲಿನ ಪುರಾತನ ಆರೋಪ!.

ಪ್ರಶಸ್ತಿಗಳು

  • ‌ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -೧೯೬೬
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- ೧೯೭೫
  • ಪಂಪ ಪ್ರಶಸ್ತಿ - ೨೦೦೫
  • ಎನ್ ಟಿ ಆರ್‍ ರಾಷ್ಟ್ರೀಯ ಸಾಕ್ಷರತಾ ಪ್ರಶಸ್ತಿ- ೨೦೦೭
  • ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು- ೨೦೦೭
  • ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- ೨೦೧೧
  • ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)- ೨೦೧೨
ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್.ಎಲ್. ಭೈರಪ್ಪನವರನ್ನು ೨೦೧೨ರ "ವಾಗ್ವಿಲಾಸಿನಿ ಪುರಸ್ಕಾರ್"ಗೆ ಆಯ್ಕೆ ಮಾಡಲಾಗಿದೆ. ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತ್ತು. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು ಅವರಲ್ಲಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜ್ರು ಸುಲ್ತಾನ್ಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರೊಬ್ಬರಿಗೆ ನೀಡುತ್ತಿರುವ ವೊದಲ ಸಂದರ್ಭ ಇದಾಗಿದೆ. ಮಹಾರಾಷ್ಟ್ರದವರು ಭೈರಪ್ಪನವರನ್ನು "ಕನ್ನಡದಲ್ಲಿ ಬರೆಯುತ್ತಿರುವ ಮರಾಠಿ ಲೇಖಕ" ಎಂದೇ ಗುರುತಿಸುತ್ತಾರೆ. ಏಪ್ರಿಲ್ 24ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಕೃತಿಗಳು

ಜೀವನಚರಿತ್ರೆ
ತತ್ತ್ವಶಾಸ್ತ್ರ
  • ಸತ್ಯ ಮತ್ತು ಸೌಂದರ್ಯ (೧೯೬೬)
  • ಸಾಹಿತ್ಯ ಮತ್ತು ಪ್ರತೀಕ (೧೯೬೭)
  • ಕಥೆ ಮತ್ತು ಕಥಾವಸ್ತು (೧೯೬೯)
  • ನಾನೇಕೆ ಬರೆಯುತ್ತೇನೆ? (೧೯೮೦)

ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು

ದೃಶ್ಯ ಮಾಧ್ಯಮದಲ್ಲಿ ಭೈರಪ್ಪನವರ ಕಾದಂಬರಿಗಳು

ಚಲನಚಿತ್ರ

ಟಿ.ವಿ. ಧಾರಾವಾಹಿ

ಹೊರಗಿನ ಸಂಪರ್ಕಗಳು